Friday, April 22, 2011

ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು


ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದಾರಿದೀಪವಾಗುವ ಮತ್ತು ಜನ ಜಾಗೃತಿ ಮೂಡಿಸುವ ಕಾರ್‍ಯವಾಗಬೇಕು ಎಂದು ಕವಿ ರಾಘವೇಂದ್ರ ದಂಡಿನ್ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೪೮ನೇ ಕವಿಸಮಯದಲ್ಲಿ ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೊಪ್ಪಳದಲ್ಲಿ ಇಂದು ಎಲ್ಲ ತಲೆಮಾರಿನ ಕವಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತಿದ್ದಾರೆ. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮುಂದೊಂದು ದಿನ ಕೊಪ್ಪಳದ ಭರವಸೆಯ ಯುವಕವಿಗಳು ರಾಜ್ಯದ ಗಮನಸೆಳೆಯುವಂತಾಗಲಿ ಎಂದು ಹಾರೈಸಿದರು.
ಇದಕ್ಕೂ ಮೊದಲು ನಡೆದ ಯುಗಾದಿ ವಿಶೇಷ ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ ಮೂಕ ಸಾಕ್ಷಿ, ವೀರಣ್ಣ ಹುರಕಡ್ಲಿ- ಚಂದ್ರಮಾನ ಯುಗಾದಿ, ಪುಷ್ಪಲತಾ ಏಳುಬಾವಿ- ಮನ, ಪರಶುರಾಮಪ್ರಿಯ- ಹೃದಯವುಳ್ಳ, ಜನುಮದ ಜೋಡಿ, ವಿಠ್ಠಪ್ಪ ಗೋರಂಟ್ಲಿ- ಗೊತ್ತಾಗದಂತೆ ಬಂದು ಹೋದ ಯುಗಾದಿ, ಶ್ರೀನಿವಾಸ ಚಿತ್ರಗಾರ- ಯುಗಾದಿ ಚುಟುಕುಗಳು, ಶಿವಪ್ರಸಾದ ಹಾದಿಮನಿ-ಹಾಯ್ಕುಗಳು, ಸಿರಾಜ್ ಬಿಸರಳ್ಳಿ- ಚರಿತ್ರೆಯ ಪುಟಗಳು, ಡಾ.ಮಹಾಂತೇಶ ಮಲ್ಲನಗೌಡರ-ಯುಗಾದಿ ಗೇಯ ಗೀತೆ, ಶಾಂತೇಶ ಬಡಿಗೇರ- ರೈತರ ಕ್ರಾಂತಿಯ ಕಹಳೆ, ಡಾ.ಶಿವಕುಮಾರ ಮಾಲಿಪಾಟೀಲ- ದೈವ ಭಕ್ತ, ಎ.ಪಿ.ಅಂಗಡಿ- ವಸಂತೊಂದಿಗೆ ಚೈತ್ರ ಬಂದ, ರಾಘವೇಂದ್ರ ದಂಡಿನ- ಯುಗಾದಿ , ಕತ್ತೆ ಚೌಪದಿಗಳು, ಜಡೆಯಪ್ಪ ಎನ್- ಧೂಳು, ಉಲ್ಲಾಸ, ಪ್ರೊ.ಅಲ್ಲಮಪ್ರಭು ಬೆಟ್ಟದೂರು- ಚುಟುಕುಗಳು, ರಾಮಣ್ಣ ವೇಮಲಿ-ಅಕ್ಕ , ಚಿದಾನಂದ ಕೀರ್ತಿ- ಬೇಸರ , ಜ್ವಾಲಾಮುಖಿ ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಇತ್ತೀಚೆಗೆ ಬಿಡುಗಡೆಯಾದ ಡಾ. ಶಿವಕುಮಾರ ಮಾಲಿಪಾಟೀಲರ ಪ್ರಥಮ ಕಿರಣ ಕವನ ಸಂಕಲನ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯಿತು. ಅಲ್ಲಮಪ್ರಭು ಬೆಟ್ಟದೂರರು ಆಶಯ ಚೆನ್ನಾಗಿದೆ ಜೊತೆಗೆ ಅಭಿವ್ಯಕ್ತಿಯ ರೀತಿಯನ್ನು ಉತ್ತಮಪಡಿಸಿಕೊಳ್ಳುಬೇಕು ಎಂದು ಸಲಹೆ ನೀಡಿದರು. ಸಂವಾದದಲ್ಲಿ ಎನ್.ಜಡೆಯಪ್ಪ, ಮಹೇಶ ಬಳ್ಳಾರಿ, ಶಿವಪ್ರಸಾದ ಹಾದಿಮನಿ,ಶಾಂತೇಶ ಬಡಿಗೇರ, ಡಾ. ರೇಣುಕಾರ ಕರಿಗಾರ ಭಾಗವಹಿಸಿದ್ದರು. ವಿಠ್ಠಪ್ಪ ಗೋರಂಟ್ಲಿಯವರು ಆರಂಭಿಕ ಹಂತದಲ್ಲಿರುವ ಕವಿ ಇನ್ನೂ ಬೆಳೆಯಬೇಕು. ಆಯಾ ಹಂತದ ಕವಿಗಳು ಮತ್ತು ಓದುಗರನ್ನು ತಲುಪುತ್ತಾರೆ. ಅಧ್ಯಯನದಿಂದ ಇನ್ನೂ ಹೆಚ್ಚಿನ ಕಾವ್ಯ ಕೃಷಿ ಸಾಧ್ಯ. ಕಾವ್ಯದ ಚೌಕಟ್ಟಿನಲ್ಲಿ ಬರೆಯುವುದನ್ನು ರೂಡಿಸಿಕೊಳ್ಳಬೇಕು ಎಂದರು. ವಿಮರ್ಶೆಗೆ ಪ್ರತಿಯಾಗಿ ಮಾತನಾಡಿದ ಡಾ.ಶಿವಕುಮಾರ ಮಾಲಿಪಾಟೀಲ ಮುಕ್ತ ಮನಸ್ಸಿನಿಂದ ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾವ್ಯ ರಚನೆಯತ್ತ ಗಮನ ಹರಿಸುವುದಾಗಿ ಹೇಳಿದರು.
ಕಾರ್‍ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ಅಂಟಾಳಮರದ, ಶಿವಾನಂದ ಹೊದ್ಲೂರ, ಲಕ್ಷ್ಮೀ, ಮಹಾಂತೇಶ ಕೊತಬಾಳ, ನವೀನ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹೇಶ ಬಳ್ಳಾರಿ ಸ್ವಾಗತಿಸಿದರು ,ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

No comments:

Post a Comment