Monday, October 25, 2010

ಹಳೆಯ ಪರಂಪರೆಯ ಕಾವ್ಯವನ್ನು ಯುವಕವಿಗಳು ಓದಬೇಕು- ವೀರಣ್ಣ ವಾಲಿ


ಕೊಪ್ಪಳ : ಕಾವ್ಯ ಸಾಂಸ್ಕೃತಿಕ ಮಡಿಲನ್ನು ಕಟ್ಟುತ್ತದೆ. ಕಾವ್ಯಂ ರಸಾತ್ಮಕ ವಾಕ್ಯಂ ಎನ್ನುವಂತೆ ಕಾವ್ಯದಲ್ಲಿ ರಸಬೇಕು. ಜೀವನದ ಅಭಿವ್ಯಕ್ತಿಯೇ ಕಾವ್ಯ. ನಮ್ಮ ಸಧ್ಯದ ಸಾಮಾಜಿಕ ಅವ್ಯವಸ್ಥೆಯನ್ನು ಎದುರಿಸುವುದಕ್ಕೆ ಕಾವ್ಯ ಪ್ರಭಾವಶಾಲಿ ಮಾಧ್ಯಮ,ಸಾಹಿತ್ಯ ಯಾವತ್ತೂ ನಿಂತ ನೀರಲ್ಲ ಅದು ನಿರಂತರ ಚಲನಶೀಲತ್ವ ಹೊಂದಿದೆ. ನಮ್ಮ ಕಾವ್ಯ ಪರಂಪರೆಯು ಶ್ರೀಮಂತವಾದುದು. ಯುವಕವಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ಹಳೆಯ ಪರಂಪರೆಯ ಕಾವ್ಯವನ್ನು ಓದುವದರ ಮೂಲಕ ತಮ್ಮ ಕಾವ್ಯವನ್ನು ಗಟ್ಟಿಗೊಳಿಸಿಕೊಳ್ಳುವತ್ತ ಸಾಗಬೇಕು ಎಂದು ಬಂಡಾಯ ಕವಿ ವೀರಣ್ಣ ವಾಲಿ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನ್ಯಭಾಷಾ ಸಾಹಿತ್ಯವನ್ನು ಓದುವುದರಿಂದ ಬೆಳವಣಿಗೆ ಸಾಧ್ಯ,ನಿರಂತರ ಅಧ್ಯಯನ ಶೀಲತೆಯಿಂದ ಸಮೃದ್ದ, ಗಟ್ಟಿಯಾದ ಕಾವ್ಯ ರಚನೆ ಸಾಧ್ಯ ಅದರತ್ತ ಯುವ ಕವಿಗಳು ಗಮನ ಹರಿಸಬೇಕು ಎಂದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎನ್.ಜಡಿಯಪ್ಪ- ಒಳಬರಬೇಡ ಹೊರಗೆ ನಿಲ್ಲು, ಶಿವಪ್ರಸಾದ ಹಾದಿಮನಿ-ಹಗರಣಗಳು ಎಷ್ಟು ಬಲ್ಲಿರಾ?, ಶಾಂತಪ್ಪ ಬಡಿಗೇರ-ಭೂದೇವಿ, ಎಂ.ಎಸ್.ಕಂಬಾಳಿಮಠ-ಭುವಿಯ ಬಾನು,ಶಿ.ಕಾ.ಬಡಿಗೇರ-ನಮನ,ವಾಗೀಶ ಪಾಟೀಲ್- ಆ ದಿನಗಳು, ಮಲ್ಲಿಕಾರ್‍ಜುನ - ಅರ್ಥ, ಶ್ರೀಮತಿ ಅರುಣಾ ನರೇಂದ್ರ- ಆಧುನಿಕ ವಚನಗಳು ಕವನಗಳನ್ನು ವಾಚನ ಮಾಡಿದರು. ವೀರಣ್ಣ ಹುರಕಡ್ಲಿ, ತಿಪ್ಪೇಸ್ವಾಮಿ ಭೋದಾ, ಗಿರೀಶ ಹೊನ್ನಾಳು ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ ,ವಂದನಾರ್ಪಣೆ- ಎಸ್.ಎಂ.ಕಂಬಾಳಿಮಠ ಮಾಡಿದರು. ಶಿ.ಕಾ.ಬಡಿಗೇರ ಕಾರ್‍ಯಕ್ರಮ ನಿರೂಪಿಸಿದರು.

Monday, October 18, 2010

ಕವಿಗೆ ಬದ್ದತೆ ಇರಬೇಕು - ಡಾ.ಮಹಾಂತೇಶ ಮಲ್ಲನಗೌಡರ



ಕೊಪ್ಪಳ : ಕವಿ ಸ್ವಸಂತೊಷಕ್ಕಾಗಿ ರಚಿಸಿದ ಕವಿತೆ ಎಲ್ಲರಿಗೂ ತಲುಪಬೇಕು. ಓದುಗರು ಅವರವರ ಭಾವನೆಗಳಿಗೆ ತಕ್ಕಂತೆ ಕವನವನ್ನು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಕವನಗಳು ನಾನಾ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಹಾಡುವುದು ಅನಿವಾರ್‍ಯ ಕರ್ಮ ನನಗೆ ಎನ್ನುವಂತೆ ವಿಮರ್ಶೆಗಳಿಗೆ ಅಂಜದೇ ಕವಿ ಬರೆಯುತ್ತಾ ಹೋಗಬೇಕು . ಕವಿಯಾದವನು ಸಮಾಜದೊಂದಿಗೆ ಹೋರಾಟಕ್ಕಿಳಿಯುತ್ತಾನೆ. ಸ್ವಂತ ಬದುಕು ಮತ್ತು ಸಾಮಾಜಿಕ ಬದುಕುಗಳ ನಡುವೆ ಹೋರಾಡುತ್ತ ಕವಿತೆ ಬರೆಯುವ ಕವಿಗೆ ಬದ್ದತೆ ಇರಬೇಕು ಎಂದು ಹಿರಿಯ ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಕಾವ್ಯದ ವಿಮರ್ಶೆ ಮಾಡಿ ಮಾತನಾಡುತ್ತಿದ್ದರು. ಇತ್ತೀಚಿಗೆ ಬದ್ದತೆ ಇರುವ ಕವಿಗಳು, ಸಾಹಿತಿಗಳು ಕಡಿಮೆಯಾಗುತ್ತಿದ್ದಾರೆ ಸಾಮಾಜಿಕ ಜೀವನದಲ್ಲಿ ಹೋರಾಟದ ಬದಲು ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿದ್ದಾರೆ ಎಂದು ಅವರು ವಿಷಾಧಿಸಿದರು.
ಡಾ.ಮಹಾಂತೇಶ ಮಲ್ಲನಗೌಡರು ಭಾವಪೂರ್ಣವಾಗಿ ತಮ್ಮ ಭಾವಗೀತೆಯನ್ನು ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೂ ಮೊದಲು ನಡೆದ ಕವನ ವಾಚನದಲ್ಲಿ ಶಿವಪ್ರಸಾದ ಹಾದಿಮನಿ- ರಸ ಋಷಿಗೆ ನಮನ, ಎನ್.ಜಡೆಯಪ್ಪ- ಚುಟುಕುಗಳು, ರಮೇಶ ಬನ್ನಿಕೊಪ್ಪ-ವಿಮೋಚನೆ, ಶಿ.ಕಾ.ಬಡಿಗೇರ-ಒಡಲ ದನಿ, ಮಹೇಶ ಬಳ್ಳಾರಿ-ನಿತ್ಯಾನಂದ, ಸಿರಾಜ್ ಬಿಸರಳ್ಳಿ- ತೇರು ಎಳೆಯೋಣ, ಎ.ಪಿ.ಅಂಗಡಿ- ಕಿನ್ನಾಳದ ಗೊಂಬೆಗಳು, ಬಸಪ್ಪ ಬಾರಕೇರ- ವಚನಗಳು, ಪುಷ್ಪಲತಾ ಏಳುಬಾವಿ- ಹೈಕುಗಳು, ಶಾಂತೇಶ ಬಡಿಗೇರ- ಅಂಬೆ ಕವನಗಳನ್ನು ವಾಚನ ಮಾಡಿದರು. ಮಹೇಶ ಬಳ್ಳಾರಿ ಸ್ವಾಗತಿಸಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 11, 2010

ಸಮಾಜ ಮುಖಿ ಕಾವ್ಯ ಸೃಷ್ಟಿಯಾಗಲಿ- ಈಶ್ವರ ಹತ್ತಿ




ಕೊಪ್ಪಳ : ಇಂದಿನ ಬದುಕು ಅಸ್ತಿರತೆ,ತಳಮಳದಿಂದ ಕೂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕವಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಮುಖಿ ಕಾವ್ಯ ರಚಿಸಬೇಕು ಎಂದು ವಿಮರ್ಶಕ,ಕವಿ ಈಶ್ವರ ಹತ್ತಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೪ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾವ್ಯ ಎನ್ನುವುದು ಜೀವನಾನುಭವವಾಗಿರಬೇಕು, ಕಿರಿದಾದ ಶಬ್ದಗಳಲ್ಲಿ ದೊಡ್ಡ ಅರ್ಥವನ್ನು ನೀಡುವಂತಾಗಬೇಕು. ಇದಕ್ಕಾಗಿ ಯುವಕವಿಗಳು ಹಿರಿಯ ಕವಿಗಳ ಕಾವ್ಯವನ್ನು ಓದಬೇಕು, ಭಾಷೆಯನ್ನು ಸರಿಯಾಗಿ ದುಡಿಸಿಕೊಳ್ಳಬೇಕು. ಮೊದಲು ಕಾವ್ಯ ಕವಿಗೆ ಆನಂದ ನೀಡಿದರೆ ಅದು ಎಲ್ಲರಿಗೂ ತಲುಪುತ್ತದೆ. ಕಾಟಾಚಾರಕ್ಕೆ ಎಂಬಂತೆ ಬರೆದರೆ ಅದು ಕಾವ್ಯವಾಗಲಾರದು,ಕಾವ್ಯದ ಲಕ್ಷಣಗಳ ಬಗ್ಗೆ ಅರಿವಿಟ್ಟುಕೊಂಡು ಕಲಾತ್ಮಕವಾಗಿ ಬರೆದಾಗ ಕಾವ್ಯ ನಿಲ್ಲುತ್ತದೆ ಎಂದು ಹೇಳಿದರು.
ಕವಿಸಮಯದಲ್ಲಿ ಶಿವಪ್ಪ ಶೆಟ್ಟರ್-ನೀನೇ ನೀನು, ಎನ್.ಜಡೆಯಪ್ಪ-ಗಾಂಧಿ ಕನಸು,ಮಲ್ಲಿಕಾರ್ಜುನ- ಅಂಧಕಾರ, ಶಾಂತಾದೇವಿ ಹಿರೇಮಠ- ಒಲಿದರೆ ನಾರಿ ಮುನಿದರೆ ಮಾರಿ, ಎಸ್.ಎಂ.ಕಂಬಾಳಿಮಠ- ಕೇಳಿ, ಹರಿಯಲು ಬಿಡಿ, ನಾಗೇಂದ್ರ ಪ್ರಸಾದ ಕಾಮನೂರ-ಇನ್ನಾದರೂ ನೆಟ್ಟಗಾಗಿರಿ, ಶಿ.ಕಾ.ಬಡಿಗೇರ- ಒಡಲ ದನಿ, ವೀರಣ್ಣ ಹುರಕಡ್ಲಿ- ಇಂದಿನ ಆದರ್ಶ ಜೀವಿಗಳು, ಸಿರಾಜ್ ಬಿಸರಳ್ಳಿ-ಭರವಸೆ,ಸುಮತಿ-ಮುಖ ಮುಖವಾಡಗಳು, ಪುಷ್ಪಲತಾ ಏಳುಬಾವಿ- ಮರಳು, ಗಜಲ್, ರಮೇಶ ಬನ್ನಿಕೊಪ್ಪ- ಈ ಸ್ವಾಮಿಯರೇ ಹೀಗೆ, ಈಶ್ವರ ಹತ್ತಿ- ತ್ರಿಪದಿಗಳು, ಬಸವರಾಜ್ ಸೂಳಿಬಾವಿ- ಹಾಯ್ಕುಗಳು, ಅರೀಪ್ ರಾಜಾರ ಕವನಗಳನ್ನು ವಾಚನ ಮಾಡಿದರು.
ತಿಪ್ಪೆಸ್ವಾಮಿ ಬೋದಾ,ಹಿರಿಯ ಪತ್ರಕರ್ತರಾದ ಬಸವರಾಜ ಶೀಲವಂತರ, ಬಸವರಾಜ ಸೂಳಿಬಾವಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ಸ್ವಾಗತಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, October 4, 2010

ಹಂತ ಹಂತವಾಗಿ ಕವಿ ಬೆಳೆಯುತ್ತಾ ಹೋಗಬೇಕು - ಶಾಂತಾದೇವಿ ಹಿರೇಮಠ : ಕವಿಯ ಮನಸ್ಸು ಪ್ರಯೋಗಶೀಲವಾಗಿರಬೇಕು- ವಿ.ಹರಿನಾಥಬಾಬು





ಕೊಪ್ಪಳ : ಕನ್ನಡನೆಟ್.ಕಾಂ ಕವಿಸಮೂಹದ ೨೩ನೇ ಕವಿಸಮಯ ಕಾರ್‍ಕ್ರಮ ವಿಶೇಷವಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ಹಿರಿಯ ಕವಿಯತ್ರಿ ಬೆಳೆಯುವ ಕವಿಗಳಿಗೆ "ಅಂಬೆಗಾಲಿಡುವ ಮಗುವಿನಂತೆ ಕವಿ ಬೆಳೆಯುತ್ತಾ ಹೋಗಬೇಕು. ಯಾರೂ ಒಮ್ಮೇಲೆ ಶ್ರೇಷ್ಠ ಕವಿಯಾಗಲು ಸಾಧ್ಯವಿಲ್ಲ. ನಿರಂತರ ಓದು,ಜೀವನಾನುಭವ ಕವಿಯನ್ನು ಬೆಳೆಸುತ್ತದೆ. ಎಲ್ಲ ಹಿರಿಯ ಕಿರಿಯರ ಕವನಗಳನ್ನು ಓದುತ್ತಾ ಬೆಳೆಯುತ್ತಾ ಹೋಗಬೇಕು ಎಂದು ಹೇಳಿದರು. ಯುವಕವಿಗಳು ವಿಮರ್ಶೆಗೆ ಹೆದರಿ ಬರೆಯುವುದನ್ನು ನಿಲ್ಲಿಸಬಾರದು.ಸ್ವವಿಮರ್ಶೆ ಮಾಡಿಕೊಳ್ಳುತ್ತ ಉತ್ತಮ ಕಾವ್ಯ ರಚನೆಯಲ್ಲಿ ತೊಡಗಬೇಕು. ತಾವು ಇನ್ನೂ ಕಲಿಯುವ ಕವಿಯತ್ರಿ, ತಮಗೆ ಎಲ್ಲರ ಮಾರ್ಗದರ್ಶನ ಅಗತ್ಯ ಎನ್ನುವ ಮೂಲಕ ಸೌಜನ್ಯ ಮೆರೆದರು.
ಕವಿಸಮಯದಲ್ಲಿ ೨೨ ಕವಿಗಳು ಕವನ ವಾಚನ ಮಾಡಿದರು. ಕವನಗಳ ವಿಮರ್ಶೆಯನ್ನು ಇನ್ನೊರ್ವ ಅತಿಥಿ ಕವಿ ವಿ.ಹರಿನಾಥ ಬಾಬು ಮಾಡಿದರು. ಕವನಗಳ ವಿಶ್ಲೇಷಣೆ ಮಾಡಿ ಮಾತನಾಡಿದ ಅವರು "ಕವಿ ಎನ್ನುವ ಕ್ರಿಯಾಪದದಂತೆ ಕವಿಯಾದವನು ಎಲ್ಲವನ್ನೂ,ಎಲ್ಲರನ್ನೂ ಆವರಿಸಿಕೊಳ್ಳಬೇಕು. ನಮ್ಮ ಕವಿತೆಗಳು ಎಲ್ಲರನ್ನು ಸಮ್ಮೋಹನಗೊಳಿಸುವಂತಿರಬೇಕು. ಸಶಕ್ತವಾದ ಪದಗಳ ಬಳಕೆ ಕವಿತೆಗೆ ತೂಕ ನೀಡುತ್ತದೆ. ಭಾಷೆಯನ್ನು ಒಡೆದು ಕಟ್ಟುತ್ತಾ ಹೋಗಬೇಕು.ಹಾಗಾದಾಗ ಹೊಸದನ್ನು ಕಟ್ಟಲು ಸಾಧ್ಯ. ಕವಿತೆಗೆ ರೂಪಕ,ಉಪಮೆ, ಅಲಂಕಾರಗಳು ಬೇಕು. ಆದರೆ ಅವೇ ಕವನಕ್ಕೆ ಭಾರವಾಗುವಂತಿರಬಾರದು. ನಿರಂತರ ಗಂಭೀರವಾದ ಓದು ಬೆಳಕಿನಂತೆ. ಅದು ಕವಿಯನ್ನು ಉತ್ತಮವಾದ ದಾರಿಗೆ ನಡೆಸುತ್ತದೆ, ಕವಿಗಳು ಹೆಚ್ಚಾದಂತೆ ಮಾನವತೆ ಹೆಚ್ಚಾಗುತ್ತೆ. ಸಮಕಾಲೀನ ಸಮಸ್ಯೆಗಳಿಗೆ ತತ್ ಕ್ಷಣಕ್ಕೆ ಪ್ರತಿಕ್ರಿಸುವಂತಾಗಬೇಕು.ಬರೆದ ಕವಿತೆಯನ್ನು ಕೇಳುಗರಿಗೆ ಸರಿಯಾಗಿ ಮುಟ್ಟಿಸುವ ಕೆಲಸವಾಗಬೇಕು. ಕವಿಯ ಮನಸ್ಸು ಸದಾ ಪ್ರಯೋಗಶೀಲವಾಗಿರಬೇಕು. ಹೊಸತನದ ಸೃಷ್ಟಿಸಲು ಸಾಧ್ಯ ಎಂದು ಅವರು ಹೇಳಿದರು".
ಕವಿಸಮಯದಲ್ಲಿ ಮಹೇಶ ಬಳ್ಳಾರಿ-ಪುಟ್ಟಜ್ಜ, ಜಿ.ಎಸ್.ಬಾರಕೇರ-ತುಂಗಭದ್ರೆಯರು, ಶ್ರೀನಿವಾಸ ಚಿತ್ರಗಾರ-ಸಾಕಿನ್ನು ಮಗಳೆ, ವಾಸುದೇವ ಕುಲಕರ್ಣಿ- ಸೋಮಾರಿ, ಶಾಂತಾದೇವಿ ಹಿರೇಮಠ- ಸಾಕಾರ ರೂಪಿ, ಕನಕಪ್ಪ ತಳವಾರ- ಕವಿತೆ ಎಂದರೆ ಏನಂತಿ?, ಎಸ್.ಎಂ.ಕಂಬಾಳಿಮಠ-ಹುಲಿ ಬಂತು ಹುಲಿ,ಅಲ್ಲಮಪ್ರಭು ಬೆಟ್ಟದೂರ- ಗಾಂಧಿ, ರೊಟ್ಟಿ, ಸುಮತಿ- ಬೆನ್ನ ಹಿಂದಿನ ಹೆರಳು, ಶಿ.ಕಾ.ಬಡಿಗೇರ-ಕವಿತೆಯ ಬೆನ್ನತ್ತಿ, ವಿ.ಹರಿನಾಥ ಬಾಬು-ಲಂಗಗಳು, ಎ.ಪಿ.ಅಂಗಡಿ- ಇಂಡಿಯಾ ಗಾಂಧಿ, ಶಿವಪ್ರಸಾದ ಹಾದಿಮನಿ- ಗಾನಯೋಗಿ ಪುಟ್ಟರಾಜರ ನೆನೆದು, ವೀರಣ್ಣ ಹುರಕಡ್ಲಿ- ಶಾಂತಿ ತತ್ವ, ಪುಷ್ಪಲತಾ ಏಳುಬಾವಿ- ಹಾಯ್ಕುಗಳು, ಲಕ್ಷ್ಮೀ- ಕನಸು, ಹನುಮಂತಪ್ಪ ಅಂಡಗಿ- ಪುಟ್ಟರಾಜರು, ರಮೇಶ ಬನ್ನಿಕೊಪ್ಪ- ಆ ಮುಗ್ದ ಹುಡುಗಿ, ಮಾನಪ್ಪ ಬೆಲ್ಲದ- ಧರೆಯ ಬೆಳಕು, "ಠ್ಠಪ್ಪ ಗೋರಂಟ್ಲಿ- ಪುಟ್ಟರಾಜರು ಏರಿದ ಎತ್ತರ, ಸಿರಾಜ್ ಬಿಸರಳ್ಳಿ- ಬೆಂಕಿ ಹಚ್ಚಿ ಎನ್ನುವ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಶಂಕರಪ್ಪ ಕಾತರಕಿ, ಕೃಷ್ಣಪ್ಪ ಸಂಗಟಿ,ಮಂಜುನಾಥ ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, September 27, 2010

ಕವಿತೆಯಲ್ಲಿ ಬರೀ ವರ್ಣನೆ ಅಲ್ಲ ಧ್ವನಿಯೂ ಇರಬೇಕು- ಎಚ್.ಎಸ್.ಪಾಟೀಲ್



ಕಾವ್ಯ ಎಲ್ಲಕಾಲದಲ್ಲೂ ತನ್ನ ಉಷ್ಣತೆಯನ್ನು ಕಾಪಾಡಿಕೊಂಡು ಬಂದಾಗ ಸಾರ್ವಕಾಲಿಕವಾಗುತ್ತದೆ. ಕವಿತೆ ಎನ್ನುವುದು ಬರಿಯ ವರ್ಣನೆ ಅಲ್ಲ ಅದರಲ್ಲಿ ಧ್ವನಿ ಇರುತ್ತದೆ. ಅರ್ಥಪೂರ್ಣ ಸಾಲುಗಳನ್ನು ಕವನದಲ್ಲಿ ಬಳಸಬೇಕು.ಪದಗಳಿಗೆ, ಶಬ್ದಗಳಿಗೆ ಕಾವ್ಯಾತ್ಮಕ ಸ್ಪರ್ಶ ಇರಬೇಕು ಎಂದು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೨ನೇ ಕವಿಸಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂದರ್ಭದಲ್ಲಿ ಕಾವ್ಯ ಯಾವ ಸ್ತರದಲ್ಲಿ ಎನ್ನುವದನ್ನು ಗಮನಿಸಬೇಕು, ವಿವಿಧ ಕವಿಗಳ ಕವನಗಳನ್ನು, ವಿವಿಧ ಸಾಪ್ತಾಹಿಕ,ವಾರಪತ್ರಿಕೆಗಳನ್ನು ಓದಬೇಕು ಎಂದರು. ನಾವು ರಚಿಸಿದ ಕವನಗಳು ಪ್ರಸ್ತುತ ಸಂದರ್ಭದ ಕವನಗಳ ಜೊತೆ ಸ್ಪರ್ಧಿಸಬೇಕು, ನಿಲ್ಲುವಂತಾಗಬೇಕು. ಇದಕ್ಕಾಗಿ ಸತತ ಅಧ್ಯಯನದಲ್ಲಿ ತೊಡಗಬೇಕು. ಹೊಸ ಪ್ರಯೋಗಗಳಿಗೆ ಒಳಗಾಗಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವನವಾಚನದಲ್ಲಿ ೨೦ ಕವಿಗಳು ತಮ್ಮ ಕವನ ವಾಚನ ಮಾಡಿದರು. ಅಲಿ ನವಾಜ್ -ನಾಡಿನ ಸಂಸ್ಕೃತಿ, ವಾಗೀಶ ಪಾಟೀಲ್- ನನ್ನೂರು, ಶಾಂತಾದೇವಿ ಹಿರೇಮಠ- ತಿರುವು, ಲಕ್ಷ್ಮೀ- ಕತ್ತಲು, ಶಾಂತು ಬಡಿಗೇರ-ದೃವತಾರೆ,ಶಿವಪ್ರಸಾದ ಹಾದಿಮನಿ-ಕಟ್ಟೋಣ, ಹಾಲಪ್ಪ, ವಾಲ್ಮಿಕಿ ಎಕರನಾಳ- ಪುಣ್ಯಕೋಟಿ ಗುರುರಾಜ, ಡಾ.ಮಹಾಂತೇಶ ಮಲ್ಲನಗೌಡರ- ಹಾರಾಡಿ ಶಾಂತಿ ದೂತರೆ, ಎಸ್. ಕಂಬಾಳಿಮಠ- ಯೋಗಿ ಪುಂಗವ ಮರಿಶಾಂತವೀರ,ಡಾ.ವಿ.ಬಿ.ರಡ್ಡೇರ್-ಅಂದು ಗದುಗಿನಲಿ, ಶಿ.ಕಾ.ಬಡಿಗೇರ- ಹಾಯ್ಕುಗಳು, ಎನ್.ಜಡೆಯಪ್ಪ- ಗುರು ಪುಟ್ಟರಾಜ, ವಾಸುದೇವ ಕುಲಕರ್ಣಿ- ಜ್ಞಾನಜ್ಯೋತಿ, ವೀರಣ್ಣ ವಾಲಿ-ಕಪ್ಪು ಗೆಳೆಯನ ಕುರಿತು, ಸಿರಾಜ್ ಬಿಸರಳ್ಳಿ- ಕ್ರಾಂತಿ ಸೂರ್‍ಯನ ಕಂದೀಲು, ಪುಷ್ಪಾ ಏಳುಬಾವಿ-ಯಾರು ನೀನು? , ಮೌನೇಶ- ಮಿನುಗು, ನಾಗರಾಜ್ ಬೆಣಕಲ್- ಸ್ನೇಹ ಕವನಗಳನ್ನು ವಾಚನಮಾಡಿದರು.
ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ಹುಸೇನಪಾಷಾ, ಕರಿಸಿದ್ದನಗೌಡ, ಮಲ್ಲಿಕಾರ್ಜುನ, ಹನುಮಂತಪ್ಪ ಅಂಡಗಿ, ಈಶ್ವರ ಹತ್ತಿ ಇನ್ನಿತರರು ಉಪಸ್ಥಿತರಿದ್ದರು. ಶಿ.ಕಾ.ಬಡಿಗೇರ ವಂದಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Wednesday, September 22, 2010

ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ




ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ನೇರವಾಗಿ ಹೃದಯಕ್ಕೆ ತಟ್ಟುವಂತಿರಬೇಕು. ಕವನ ರಚನೆಗೆ ಬೇಕಾದ ಶಬ್ದ ಸಂಪತ್ತು ಸತತ ಓದಿನಿಂದ ಬರುತ್ತದೆ. ಹೀಗಾಗಿ ಕವಿಗಳು ಅಧ್ಯಯನ ಶೀಲರಾಗಬೇಕು. ಭಾಷೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು. ಅವರ ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೧ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನಸ್ಸು ಮುಟ್ಟುವ, ಮನಸ್ಸಿನ ಕದತಟ್ಟುವ ಭಾಷೆಯೇ ಕಾವ್ಯ . ಇದನ್ನು ಸಶಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಕಾವ್ಯ ಎಂದರೇನು, ಸಾಹಿತ್ಯ ಎಂದರೇನು ಎನ್ನುವಂತಹ ನೂರಾರು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸಮಾಜವನ್ನು ತೆರೆದಿಡುವ , ಸರಿದಾಗಿ ಯಾವುದೆಂದು ತೋರುವುದು ಕಾವ್ಯದ ಕೆಲಸವಾಗಬೇಕು. ತಿದ್ದುವದು ಸಾಧ್ಯವಾಗದಿದ್ದರೂ, ಸರಿದಾರಿ ತೋರುವ ಕೆಲಸ ಸಾಹಿತ್ಯ ಮಾಡಬೇಕು ಎಂದರು.
ಕವಿಸಮಯದಲ್ಲಿ ಇತ್ತೀಚಿಗೆ ನಿಧನರಾದ ಪಂಡಿತ ಪುಟ್ಟರಾಜ ಗವಾಯಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿ ೧ ನಿಮಿಷ ಮೌನ ಆಚರಿಸಲಾಯಿತು. ನಂತರ ಅವರ ಬಗ್ಗೆ ಮುನಿಯಪ್ಪ ಹುಬ್ಬಳ್ಳಿ, ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಶಿ.ಕಾ.ಬಡಿಗೇರ- ಹಾಯ್ಕುಗಳನ್ನು, ವೀರಣ್ಣ ಹುರಕಡ್ಲಿ- ಗದುಗಿನ ಗಂದರ್ವ, ಶಿವಪ್ರಸಾದ ಹಾದಿಮನಿ- ನಾವೆಂಥ ಜನ, ಮಹೇಶ ಬಳ್ಳಾರಿ= ಭವತಿ ಭಿಕ್ಷಾಂದೇಹಿ, ಡಾ.ಮಹಾಂತೇಶ ಮಲ್ಲನಗೌಡರ- ಗುರು ಪುಟ್ಟರಾಜ, ಪುಷ್ಪಲತಾ ಏಳುಬಾವಿ- ಹುಡುಕಾಟ, ಜಡೆಯಪ್ಪ ಎನ್.- ಬಡತನ, ಎ.ಪಿ.ಅಂಗಡಿ- ನಾವು ಸೈನಿಕರು, ಜಿ.ಎಸ್.ಬಾರಕೇರ- ಡಾ.ಪುಟ್ಟರಾಜ ಗವಾಯಿ, ಸಿರಾಜ್ ಬಿಸರಳ್ಳಿ- ಸಾಕಿಯ ಪದ್ಯ, ಲಕ್ಷ್ಮೀ- ಶಿಕ್ಷಕಿ, ಅನ್ನದ ಬೆಲೆ, ವಿಠ್ಠಪ್ಪ ಗೋರಂಟ್ಲಿ- ಪುಟ್ಟನಾದವನೇ ದೊಡ್ಡವನಾಗುವನು, ಮೆಹಮೂದಮಿಯಾ-ಚಲನಶೀಲತ್ವ, ಕೆಂಚಪ್ಪ ಹಾಲವರ್ತಿ- ಯಾರಿಗಾಗಿ, ಮುನಿಯಪ್ಪ ಹುಬ್ಬಳ್ಳಿ- ಮಹಾತ್ಯಾಗಿ ಕವನಗಳನ್ನು ವಾಚನ ಮಾಡಿದರು.
ಮುನಿಯಪ್ಪ ಹುಬ್ಬಳ್ಳಿ ಕವನಗಳ ಕುರಿತು ಮಾತನಾಡಿದರು. ನಂತರ ಮಹಾಕಾವ್ಯಗಳಲ್ಲಿನ ಬಂಡಾಯದ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ, ನಾಗರಾಜ ಬೆಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿ.ಕಾ.ಬಡಿಗೇರ ಸ್ವಾಗತಿಸಿ ಮಹೇಶ ಬಳ್ಳಾರಿ ವಂದಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Monday, September 13, 2010

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ




ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು ಸಾಧ್ಯ ಎಂದು ಕವಿ, ಲೇಖಕ 'ಎತ್ತಣ ಮಾಮರ ಎತ್ತಣ ಕೋಗಿಲೆ'ಖ್ಯಾತಿಯ ಸಿದ್ದು ಯಾಪಲಪರವಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೦ನೇ ಕವಿಸಮಯದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚ್ಯತೆ ಮೀರಿದ ಕವನಗಳು ಹುಟ್ಟಬೇಕು ಇದು ಬೇರೆ ಬೇರೆ ಕವಿಗಳನ್ನು ಓದುವದರಿಂದ ವಚನ ಸಾಹಿತ್ಯದಂತವುಗಳನ್ನು ಅಧ್ಯಯನ ಮಾಡುವುದರಿಂದ ಸಾಧ್ಯ. ಕಾವ್ಯದಲ್ಲಿ ಸೂಕ್ಷ್ಮ ನೇಯುವಿಕೆ ಅಗತ್ಯ. ಗೇಯತೆ, ರೂಪಕ, ಪ್ರತಿಮೆಗಳಿರುವ ಕಾವ್ಯ ದ ಸೃಷ್ಟಿಯಾಗಬೇಕು ಎಂದರು. ಇಡೀ ವಿಶ್ವದಲ್ಲಿ ಸುಂದರ ಸೃಷ್ಟಿ ಎಂದರೆ ಕವಿತೆ, ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು , ಯುವ ಕವಿಗಳ ಕವಿತೆಗಳನ್ನು ಹಿರಿಯ ಕವಿಗಳು ತಿದ್ದಿ ಅವರಿಗೆ ಮಾರ್ಗದರ್ಶನ ನೀಡಬೇಕು ಕವಿಗೋಷ್ಠಿ ಎಂದರೇ ಹಿಂದೆ ಮುಂದೆ ನೋಡುವಂಥಹ ಪ್ರಸ್ತುತ ಸಂದರ್ಭದಲ್ಲಿ ಕವಿಸಮಯದಂತಹ ಕಾರ್‍ಯಕ್ರಮಗಳು ಹೆಚ್ಚಾಗಬೇಕು, ಲೇಖಕ ಕವಿಯಾದವನು ಹಮ್ಮನ್ನು ಬಿಟ್ಟು ಎಲ್ಲರೊಡನೆ ಬೆರೆತು ಚರ್ಚೆಗೆ ತೊಡಗುವಂತಾಬೇಕು ಇದರಿಂದ ಸುಂದರ ಕಾವ್ಯ ರಚನೆ ಸಾಧ್ಯ ಎಂದರು.
ಇದಕ್ಕೂ ಮೊದಲು ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ವಿಪರ್‍ಯಾಸ, ಶಿ.ಕಾ.ಬಡಿಗೇರ- ಜನಪ್ರತಿನಿಧಿ, ಎನ್.ಜಡೆಯಪ್ಪ- ಇವರ್‍ಯಾರು?, ಶಿವಪ್ರಸಾದ ಹಾದಿಮನಿ-ರಾಜಕೀಯವಯ್ಯ, ಎ.ಪಿ.ಅಂಗಡಿ- ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಶ್ರೀನಿವಾಸ ಚಿತ್ರಗಾರ- ರಾಜಕೀಯ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ ಕುವೆಂಪು, ಅರುಣಾ ನರೇಂದ್ರ- ವಾಸ್ತವ, ಶಾಂತಾದೇವಿ ಹಿರೇಮಠ- ನಮ್ಮ ನಾಯಕರು, ವೀರಣ್ಣ ಹುರಕಡ್ಲಿ- ಸುತ್ತೋಣ ಬಾರಾ, ಸಿರಾಜ್ ಬಿಸರಳ್ಳಿ- ಮಾರುತ್ತೇವೆ ನಾವು, ಪುಷ್ಪಲತಾ ಏಳುಬಾವಿ-ಆಲಾಪನೆ, ವಾಸುದೇವ ಕುಲಕರ್ಣಿ- ಹಾರುವ ಹಕ್ಕಿಯ ಸಾಲು, ಶಾಂತು ಬಡಿಗೇರ-ಬಣ್ಣ, ಜಿ.ಎಸ್.ಬಾರಕೇರ-ಕನ್ನಡ ಕಂದನ ಆಸೆ, ಬಸವರಾಜ- ಅಮ್ಮನ ಮಡಿಲು, ಡಾ.ವಿ.ಬಿ.ರಡ್ಡೇರ- ಕದಡಬೇಡಿ ತಿಳಿನೀರ ಕೊಳವ, ವಿಠ್ಠಪ್ಪ ಗೋರಂಟ್ಲಿ- ಚುಟುಕು, ಸಿದ್ದು ಯಾಪಲಪರವಿ- ಯಾರಿವರು ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಸಿದ್ದು ಯಾಪಲಪರವಿಯವರ ನೆಲದ ಮರೆಯ ನಿದಾನ ಕುರಿತು ಸಂವಾದ ಏರ್ಪಡಿಸಲಾಗಿತ್ತು.ಸಂವಾದಲ್ಲಿ ಮಾತನಾಡಿದ ಶಿ.ಕಾ.ಬಡಿಗೇರ- ಈ ಕವನಸಂಕಲನದ ಕವನಗಳಿಗೆ ಯಾವತ್ತೂ ಮುಪ್ಪಿಲ್ಲ, ಸಾವಿಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ, ಬದ್ದತೆಯುಳ್ಳ ಕವನಗಳು ಇವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪ್ರಸಾದ ಹಾದಿಮನಿ- ಕವಿಯನ್ನು ನವ್ಯ ಎನ್ನಬೇಕೋ, ಸಾಮಾಜಿಕ ಕವಿ ಎನ್ನಬೇಕೋ ತಿಳಿಯದಾಗಿದೆ. ಅವರ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ಡಾ.ವಿ.ಬಿ.ರಡ್ಡೇರ ಮಾತನಾಡಿ ಸಿದ್ದು ಯಾಪಲಪರವಿಯವ ಮೇಲೆ ವಚನ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ ಎಂದರು. ಬೂಟು ಪಾಲೀಸು ಮಾಡುವ ಹುಡುಗನ ಕುರಿತ ಕವನದ ಕುರಿತು ಅತೀ ಮೆಚ್ಚುಗೆ ವ್ಯಕ್ತಪಡಿಸಿದರು. ವಿಠ್ಠಪ್ಪ ಗೋರಂಟ್ಲಿಯವರೂ ಸಹ ಸಿದ್ದು ಯಾಪಲಪರವಿ ಬಹುಮುಖ ಪ್ರತಿಭೆಯ ವ್ಯಕ್ತಿ , ಅವರ ಕವನಗಳಲ್ಲಿ ವಚನಗಳ ಪ್ರಭಾವ ಎದ್ದು ಕಾಣುವಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಕೊನೆಯಲ್ಲಿ ಮಾತನಾಡಿದ ಕವಿ ಸಿದ್ದು ಯಾಪಲಪರವಿ ತಮ್ಮ ಕವನಗಳ ಹುಟ್ಟಿನ ಕುರಿತು ಮಾತನಾಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್‍ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾಪಲಪರವಿಯವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಜಿಲ್ಲೆಯ ಯುವ ಕವಿಗಳಿಗೆ, ಲೇಖಕರಿಗೆ ಅವರ ಮಾರ್ಗದರ್ಶನ ನೀಡುವಂತಾಗಲಿ ಎಂದರು.